ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸಗಳ ಮೇಲಿನ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ದಾಳಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇಡಿ ಅಧಿಕಾರಿಗಳು ತನಿಖೆ ಮುಗಿಸಿ ಹೊರಡುತ್ತಿದ್ದಂತೆ, ಇತ್ತ ವೈ. ಮಂಜುನಾಥ್ ಅವರು ಬೆಂಗಳೂರಿನಿಂದ ನೇರವಾಗಿ ಬೆಳಗಾವಿಯ ತಮ್ಮ ನಿವಾಸಕ್ಕೆ ಧಾವಿಸಿದ್ದಾರೆ.

ಇಡಿ ಅಧಿಕಾರಿಗಳು ಹೋದ ಬೆನ್ನಲ್ಲೇ ಎಂಟ್ರಿ!
ಬೆಳಗಾವಿಯ ಟಿವಿ ಸೆಂಟರ್ ಬಳಿ ಇರುವ ಮಂಜುನಾಥ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ, ಸುದೀರ್ಘ ಪರಿಶೀಲನೆ ಹಾಗೂ ದಾಖಲೆಗಳ ಮರುಪರಿಶೀಲನೆಯ ನಂತರ ದಾಳಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ವಾಪಸ್ ತೆರಳಿದೆ. ಅಧಿಕಾರಿಗಳು ಮನೆಯಿಂದ ಹೊರಟ ಕೆಲವೇ ಸಮಯದ ಬಳಿಕ ಮಂಜುನಾಥ್ ಅವರು ತಮ್ಮ ನಿವಾಸವನ್ನು ಪ್ರವೇಶಿಸಿದ್ದಾರೆ.
ತನಿಖೆಯ ಮುಂದಿನ ಹಂತವೇನು?
ಸಚಿವರ ಆಪ್ತ ಹಾಗೂ ಉನ್ನತ ಅಧಿಕಾರಿಯ ಮನೆ ಮೇಲಿನ ಈ ಇಡಿ ದಾಳಿ ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದೆ. ದಾಳಿಯ ವೇಳೆ ಅಧಿಕಾರಿಗಳಿಗೆ ಸಿಕ್ಕಿರುವ ಪ್ರಮುಖ ದಾಖಲೆಗಳು ಹಾಗೂ ಮುಂದಿನ ಕಾನೂನು ಕ್ರಮಗಳೇನು ಎಂಬುದು ಸದ್ಯದಲ್ಲೇ ಹೊರಬೀಳಬೇಕಿದೆ. ಸದ್ಯ ನಿವಾಸಕ್ಕೆ ಮಂಜುನಾಥ್ ಆಗಮಿಸಿರುವುದರಿಂದ, ಇಡಿ ಅಧಿಕಾರಿಗಳು ಅವರಿಗೆ ಯಾವುದೇ ನೋಟಿಸ್ ನೀಡಿದ್ದಾರೆಯೇ ಅಥವಾ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆಯೇ ಎಂಬ ಮಾಹಿತಿ ಇನ್ನು ಹೊರಬರಬೇಕಿದೆ.

