ಬೆಳಗಾವಿ, ಜೂ.24: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವತಿಯಿಂದ ಬೆಳಗಾವಿಯಲ್ಲಿ ಸ್ಥಾಪಿಸಲಾದ ಆಧಾರ್ ಸೇವಾ ಕೇಂದ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುಐಡಿಎಐ ಉಪನಿರ್ದೇಶಕಿ ಸಿರಿ ಆನಂದ್ ವಿ. ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಯುಐಡಿಎಐ ಕೈಗೊಂಡಿರುವ ನಾಗರಿಕ ಸ್ನೇಹಿ ಸೇವಾ ಕ್ರಮಗಳನ್ನು ಶ್ಲಾಘಿಸಿದರು. ಸಾರ್ವಜನಿಕರ ದೂರುಗಳ ತ್ವರಿತ ಪರಿಹಾರ ಹಾಗೂ ಗುಣಮಟ್ಟದ ಸೇವೆ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಅಲ್ಲದೆ, ಆಧಾರ್ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಸೇವೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಯವರ ಆಧಾರ್ ಬಯೋಮೆಟ್ರಿಕ್ ಮಾಹಿತಿಯ ನೇರ ನವೀಕರಣ ಪ್ರಕ್ರಿಯೆ ನಡೆಸಲಾಯಿತು. ಜೊತೆಗೆ ಆಧಾರ್ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯ ಪ್ರಾತ್ಯಕ್ಷಿಕೆಯನ್ನು ಸಹ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಯುಐಡಿಎಐ ಉಪನಿರ್ದೇಶಕಿ ಸಿರಿ ಆನಂದ್ ವಿ., ವ್ಯವಸ್ಥಾಪಕ ಮೊಹಮ್ಮದ್ ಮುಸಾಬ್, ಕ್ಲಸ್ಟರ್ ವ್ಯವಸ್ಥಾಪಕ ಶ್ಯಾಮ್ ಸುಂದರ್, ಬಿಎಲ್ಎಸ್ ಇಂಟರ್ನ್ಯಾಷನಲ್ ಸರ್ವಿಸಸ್ ಲಿಮಿಟೆಡ್ನ ಆಧಾರ್ ಸೇವಾ ಕೇಂದ್ರ ವ್ಯವಸ್ಥಾಪಕಿ ಸ್ವಾತಿ ಕೋಟಬಾಗಿ, ಜಿಲ್ಲಾ ಆಧಾರ್ ಸಲಹೆಗಾರ ವಿನೋದ್ ಹಾಗೂ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.


