ಶಿವಮೊಗ್ಗ: ಆ ಮನೆಯಲ್ಲಿ ಬರೋಬ್ಬರಿ ಐವರು ನೇಣಿಗೆ ಶರಣಾಗಿದ್ದಾರೆ. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ಅದ್ರಲ್ಲೂ ನಿನ್ನೆ ತಾಯಿ ಮತ್ತು ಮಗ ಇಬ್ಬರೂ, ಒಬ್ಬರಿಗೆ ಗೊತ್ತಿಲ್ಲದೇ, ಮತ್ತೊಬ್ಬರು ನೇಣಿಗೆ ಶರಣಾಗಿದ್ದಾರೆ. ಮತ್ತೊಬ್ಬರಿಗೆ ಬುದ್ಧಿ ಹೇಳಿ, ಧೈರ್ಯ ತುಂಬಿ ತಿದ್ದಬೇಕಿದ್ದ ವೈದ್ಯೆಯೇ ನೇಣಿಗೆ ಶರಣಾಗಿರೋದು ಒಂದೆಡೆಯಾದ್ರೆ ಅಮ್ಮನ ಹತ್ರ ಜಗಳವಾಡಿಕೊಂಡ ಮಗ ಕೂಡ ನೇಣಿನ ಕುಣಿಕೆಗೆ ಕೊರಳು ಕೊಟ್ಟು ದುರಂತ ಅಂತ್ಯ ಕಂಡಿದ್ದಾರೆ.
ಹೌದು, ಇಲ್ಲಿ ಥೇಟ್ ವಿಲ್ಲಾ ರೀತಿಯಲ್ಲಿ ಕಾಣುತ್ತಿರುವ ಈ ಐಷಾರಾಮಿ ಮನೆಯಲ್ಲಿ ಇದುವರೆಗೂ ಬರೋಬ್ಬರಿ ಐವರು ನೇಣಿಗೆ ಶರಣಾಗಿರೋದು ದುರಂತ. ಮತ್ತೊಂದೆಡೆ, ರಾತ್ರಿ ಜಗಳವಾಡಿಕೊಂಡಿದ್ದ ತಾಯಿ ಮತ್ತು ಮಗ ಬೆಳಿಕು ಹರಿಯುವಷ್ಟರಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ರಾತ್ರಿ ಅದ್ಯಾವುದೋ ವಿಚಾರದಲ್ಲಿ ಜಗಳವಾಡಿಕೊಂಡಿದ್ದ ತಾಯಿ ಮತ್ತು ಮಗ ತಮ್ಮ ತಮ್ಮ ಕೊಠಡಿಗಳಿಗೆ ತೆರಳಿ ಮಲಗಿದ್ದಾರೆ. ಬೆಳಿಗ್ಗೆ 10 ಗಂಟೆಯಾದರೂ ಯಾಕೋ ಇನ್ನೂ ಏಳಲಿಲ್ಲ ಅಂತಾ ನೋಡಿದ ಸೊಸೆಗೆ ಶಾಕ್ ಕಾದಿತ್ತು. ಇಬ್ಬರೂ ಬೇರೆ, ಬೇರೆ ಕೊಠಡಿಗಳಲ್ಲಿ ಒಬ್ಬರಿಗೊಬ್ಬರು ಗೊತ್ತಿಲ್ಲದೇ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾರೆ.

ಶಿವಮೊಗ್ಗದ ಪ್ರಖ್ಯಾತ ಸ್ತ್ರೀ ರೋಗ ತಜ್ಞೆ 57 ವರ್ಷದ ಜಯಶ್ರೀ ಹಾಗೂ ಆಕೆಯ ಮಗ 34 ವರ್ಷದ ಆಕಾಶ್ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಈ ವೈದ್ಯೆ ಜಯಶ್ರೀ ಪತಿ ಸಹ ವೈದ್ಯರಾಗಿದ್ದವರು, ಹಲವಾರು ವರ್ಷಗಳ ಹಿಂದೆ ಇದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಬಳಿಕ ಮಗ ಆಕಾಶ್ ಪತ್ನಿ ಸಹ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು. ಇದೀಗ ಇದೇ ಮನೆಯಲ್ಲಿ ತಾಯಿ ಮತ್ತು ಮಗ ಕೂಡ ಆತ್ಮಹತ್ಯೆಗೆ ಶರಣಾಗಿರೋದು ಕಾಕತಾಳಿಯವೇ ಸರಿ. ಆದರೆ, ಈ ಐಷಾರಾಮಿ ಮನೆಯನ್ನು ಈ ವೈದ್ಯ ದಂಪತಿಗೆ ಮಾರಾಟ ಮಾಡಿದ್ದ ಆಗಿನ ಮನೆ ಮಾಲಿಕ ಕೂಡ ಇದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದ ಅನ್ನೋದು ಮತ್ತೊಂದು ಶಾಕಿಂಗ್ ವಿಚಾರ
ಈ ಮೃತ ಕುಟುಂಬ ಪ್ರತಿಷ್ಠಿತ ವೈದ್ಯಕೀಯ ಕುಟುಂಬವಾಗಿತ್ತು. ಶಿವಮೊಗ್ಗ ನಗರದ ಅಶ್ವಥ್ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ನಗರದಲ್ಲಿ ತಾಯಿ ಮತ್ತು ಮಕ್ಕಳ ಪ್ರಸೂತಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ. ಜಯಶ್ರೀ, ಮಗ ಆಕಾಶ್ ಮೃತರಾಗಿದ್ದು, ವಿಷಯ ತಿಳಿದು ವಿನೋಬನಗರ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಡಾ. ಜಯಶ್ರೀ ಅವರು ತಮ್ಮ ಮನೆಯ ಕೆಳ ಅಂತಸ್ತಿನಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಪುತ್ರ ಆಕಾಶ್ ಮೊದಲ ಮಹಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ತಾಯಿ ಮತ್ತು ಮಗ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದಾರೆ. ಕಳೆದ ಮೇ ತಿಂಗಳಲ್ಲಿ ಆಕಾಶ್ ಗೆ ಎರಡನೇ ಮದುವೆ ಮಾಡಿದ್ದು, ಇದೀಗ ಎರಡನೇ ಸೊಸೆ ಏಕಾಂಗಿಯಾಗಿದ್ದಾರೆ.


