Letest Postಕ್ರೈಂ

ಅನೈತಿಕ ಸಂಬಂಧ ಹಿನ್ನೆಲೆ; ಸಂಕೇಶ್ವರದಲ್ಲಿ ವ್ಯಕ್ತಿಯ ಬರ್ಬರ ಕೊಲೆ, ಇಬ್ಬರು ವಶಕ್ಕೆ!

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಭೀಕರ ಕೊಲೆಯೊಂದು ಸಂಭವಿಸಿದೆ. ಅನೈತಿಕ ಸಂಬಂಧ ಹಾಗೂ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ತಲೆಗೆ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ.‌ ಸಂಕೇಶ್ವರ ಪಟ್ಟಣದ ನಿವಾಸಿಯಾದ ಬಾಬು ಭೂಸಗೋಳ (35) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಕೊಲೆಯಾದ ಬಾಬು ಭೂಸಗೋಳ

ಘಟನೆಯ ಹಿನ್ನೆಲೆ ಏನು?

ಮೂಲಗಳ ಪ್ರಕಾರ, ಕೊಲೆಯಾದ ಬಾಬು ಭೂಸಗೋಳ ಎಂಬಾತ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಮಹಿಳೆಯ ಪತಿ ಹಾಗೂ ಆತನ ಸ್ನೇಹಿತನಿಗೆ ತೀವ್ರ ಆಕ್ರೋಶವಿತ್ತು. ಇದರೊಂದಿಗೆ, ಕೊಲೆಯಾದ ವ್ಯಕ್ತಿಯು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿ, ರಸ್ತೆ ಬಂದ್ ಮಾಡಿದ್ದ ಎನ್ನಲಾಗಿದೆ. ಈತನ ಇಂತಹ ನಿರಂತರ ಆಟಾಟೋಪ ಹಾಗೂ ವರ್ತನೆಗಳಿಂದ ಬೇಸತ್ತಿದ್ದ ಆರೋಪಿಗಳು ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ.

ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಹತ್ಯೆ:

ಆರೋಪಿಗಳಾದ ಸುಬ್ಬರಾವ್ ಮತ್ತು ಅಕ್ಷಯ್ ಎಂಬುವವರು ಬಾಬು ಭೂಸಗೋಳನನ್ನು ಅಡ್ಡಗಟ್ಟಿ, ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿಗಳು ತಲೆಗೆ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಇಬ್ಬರು ವಶಕ್ಕೆ

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂಕೇಶ್ವರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಭೇಟಿ: ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸಂಕೇಶ್ವರ ಪೊಲೀಸ್ ಠಾಣೆಯ ಸಿಪಿಐ ಗಣಪತಿ ಕುಗನೊಳ್ಳಿ  ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸದ್ಯ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂಕೇಶ್ವರ ಪಟ್ಟಣದಲ್ಲಿ ಈ ಘಟನೆಯಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *

error: Content is protected !!