ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಎಲ್ಲೋ ಒಂದು ಕಡೆ ನನಗೆ ಗೊತ್ತಿಲ್ಲದೆ ನೋವು ಕೊಡುತ್ತಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಬಿ.ಸಿ.ಪಾಟೀಲ್ ಭಾವುಕರಾಗಿದ್ದಾರೆ.

ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು. ಆದರೆ, ಸಿದ್ದರಾಮಯ್ಯ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ. ನಾನು ಅವರನ್ನು ಪೊಲೀಸ್ ಅಧಿಕಾರಿಯಾಗಿ ನೋಡಿದ್ದೇನೆ. 2004 ರಿಂದ ಅವರೊಂದಿಗೆ ಶಾಸಕನಾಗಿದ್ದೆ. 2006ರಲ್ಲಿ ಅವರು ಕಾಂಗ್ರೆಸ್ಸಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನಾನು ವಿರೋಧಿಸಿದ್ದೂ ಇದೆ. ಆದರೆ ನಾನು 2008 ರಲ್ಲಿ ಕಾಂಗ್ರೆಸಿಗೆ ಬಂದ ಮೇಲೆ ಅದಾವುದನ್ನೂ ಅವರು ಮನಸ್ಸಿನಲ್ಲಿ ಇರಿಕೊಳ್ಳದೆ ನನ್ನ ಎಲ್ಲ ಚುನಾವಣೆಗಳಿಗೂ ಸಹಾಯ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬಿ.ಸಿ.ಪಾಟೀಲ್ ಸ್ಮರಿಸಿದ್ದಾರೆ.
ನನ್ನನ್ನು BC ಎಂದೇ ಕರೆಯುತ್ತಿದ್ದ ಸಿದ್ದರಾಮಯ್ಯನವರು, 2013 ರಲ್ಲಿ ನಾನು ಸೋತಾಗ ನನ್ನ ಕ್ಷೇತ್ರಕ್ಕೆ 4 ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ನಾನು ಎಂದಿಗೂ ಅದನ್ನು ಮರೆತಿಲ್ಲ. ನನ್ನ ಕ್ಷೇತ್ರದ ಜನ ಕೂಡ ಎಂದೂ ಅದನ್ನು ಮರೆಯುವುದಿಲ್ಲ. ಸಿದ್ದರಾಮಯ್ಯ ಅವರ ಗತ್ತು ಮತ್ತು ಗಾಂಭೀರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತಂದು ಕೊಟ್ಟಿತ್ತು. ಅಧಿಕಾರ ಶಾಶ್ವತವಲ್ಲ. ಅವರು ಅಧಿಕಾರ ಬಿಟ್ಟು ಇಳಿದಾಗ ನನಗೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.


