ಧಾರವಾಡ: ರಾಜ್ಯ ಸರ್ಕಾರ ಯಾವುದೇ ಸರ್ಕಾರಿ ಉದ್ಯೋಗಗಳ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಮತ್ತು ವಯೋಮಿತಿ ಸಡಿಲಿಕೆ ಕೂಡ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ರೊಚ್ಚಿಗೆದ್ದಿರುವ ವಿದ್ಯಾರ್ಥಿ ಸಂಘಟನೆ ಮತ್ತು ಸಾವಿರಾರು ಉದ್ಯೋಗಾಕಾಂಕ್ಷಿಗಳು ನಾಳೆ ಡಿಸೆಂಬರ್ 1ನೇ ತಾರೀಖಿನಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲು ಮುಂದಾಗಿದ್ದು, ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಡಿಸೆಂಬರ್ 1 ಕ್ಕೆ ಧಾರವಾಡ ಚಲೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಿ ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಕರೆ ನೀಡಲಾಗಿದೆ. ವಯೋಮಿತಿ ಸಡಿಲಿಕೆ, ಸರ್ಕಾರಿ ಉದ್ಯೋಗ ನೇಮಕಾತಿ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಕನ್ನಡದಲ್ಲಿ ಕರೆಯಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ರಾಜ್ಯಾದ್ಯಂತ 30 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲು ಕರೆ ನೀಡಲಾಗಿದೆ.
ಆದರೆ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿದ್ದು, ಈ ಕುರಿತು ಮಾತನಾಡಿದ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ನಾವು ಸಾಮಾಜಿಕ ಜಾಲತಾಣ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪ್ರತಿಭಟನೆ ವೇಳೆ ಜಂಕ್ಷನ್ ಬಂದ್ ಮಾಡಬೇಕು, ಅಹೋರಾತ್ರಿ ಧರಣಿ ಮಾಡಬೇಕು ಎಂದೆಲ್ಲಾ ಕರೆ ಕೊಡಲಾಗಿದೆ. ಈ ಹಿನ್ನೆಲೆ ನಾವು ಕೆಲ ನೋಟಿಸ್ ನೀಡಿ ಯಾರು ಪ್ರತಿಭಟನೆ ಆಯೋಜನೆ ಮಾಡುತಿದ್ದಾರೆ, ಪ್ರತಿಭಟನೆಯ ರೂಪುರೇಷೆ ಏನು.? ಎಲ್ಲಿಂದ ಜನ ಬರ್ತಾರೆ, ಯಾವ ಸ್ವರೂಪದ ಜನ ಬರ್ತಾರೆ ಎಂದು ಕೇಳಿದ್ವಿ ಆದರೆ ನೋಟಿಸ್ ಗೆ ಉತ್ತರವನ್ನು ನೀಡಿದ್ದು, ಅದು ಸ್ಪಷ್ಟತೆಯಿಂದ ಕೂಡಿಲ್ಲ.

ಈ ಹಿಂದೆ ಕೂಡ ಇವೇ ಬೇಡಿಕೆಗಳಿಗಾಗಿ ಧಾರವಾಡ ನಗರದಲ್ಲಿ ಏಕಾಎಕಿ ಜುಬ್ಲಿ ವೃತ್ತ ಸೇರಿದಂತೆ ಕೆಲ ಜಂಕ್ಷನ್ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಆ ವೇಳೆ ನಾಲ್ಕೈದು ಗಂಟೆ ರಸ್ತೆ ಜಾಮ್ ಆಗಿ ಅಂಬುಲೆನ್ಸ್ ಕೂಡಾ ಒಡಾಡಲು ತೊಂದರೆಯಾಗಿ, ಜನಜೀವನ ಅಸ್ತವ್ಯಸ್ತವಾಗಿತ್ತು. ಜುಬ್ಲಿ ಸರ್ಕಲ್ ಬಳಿ ವಿದ್ಯಾ ಸಂಸ್ಥೆಗಳಿವೆ, ಸರ್ಕಾರಿ ಕಚೇರಿಗಳು ಬಹಳಷ್ಟು ಇರುವುದರಿಂದ ಜನರಿಗೆ ಅನಾನುಕೂಲ ಆಗುತ್ತೆ. ಈ ರೀತಿ ಯಾರೇ ಹೇಳಿಕೆ ಕೊಟ್ಟರೂ ಅದಕ್ಕೆ ಯಾರು ಕಿವಿಗೊಡಬಾರದು. ಇದೆ ಕಾರಣಕ್ಕೆ ಅರ್ಜಿ ಕೊಟ್ಟವರಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಜನ ಸಾಮಾನ್ಯರ ವೇದಿಕೆ ಎಂದು ಸಂಘಟನೆ, ಕೆಲ ವಿದ್ಯಾರ್ಥಿ ಸಂಘಟನೆ ಮತ್ತು ಕೆಲ ರೈತ ಸಂಘಟನೆ ಬೆಂಬಲ ಇದೆ ಎಂದು ಹೇಳಲಾಗಿದೆ.
ಧಾರವಾಡದ ಸಪ್ತಾಪೂರ ಭಾಗದಲ್ಲಿ ಸುಮಾರು 80 ದಿಂದ 1ಲಕ್ಷ ವಿದ್ಯಾರ್ಥಿಗಳು ಇದಾರೆ. ಪಿಜಿ ಮತ್ತು ಬೇರೆ ಬೇರೆ ಕಡೆ ವಿದ್ಯಾರ್ಥಿಗಳು ಇದಾರೆ. ಈಗ ಸ್ಪರ್ಧಾತ್ಮಕ ಪರೀಕ್ಷೆ ಕರೆದಿರುವುದರಿಂದ ಕೂಡಾ ಹೆಚ್ಚು ವಿದ್ಯಾರ್ಥಿಗಳು ಈ ಭಾಗದಲ್ಲಿ ಇದಾರೆ. ಹೀಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಿಉತದೃಷ್ಠಿಯಿಂದ ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆ ಬರಬಾರದು ಅನ್ನೊ ಕಾರಣಕ್ಕೆ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ.


