ಬೆಳಗಾವಿ: ಬೆಳಗಾವಿಯ ಚಳಿಗಾಲದ ಅಧಿವೇಶನ ಇಡೀ ರಾಜ್ಯದ ಗಮನ ಸೆಳೆಯಲಿದೆ. ಉತ್ತರ ಕರ್ನಾಟಕಕ್ಕೆ ಆಗ್ತಿರೋ ಅನ್ಯಾಯದ ವಿರುದ್ಧ ಪ್ರತ್ಯೇಕ ರಾಜ್ಯದ ಕೂಗು ಜೋರಾಗಲಿದೆ. ಉತ್ತರ ಕರ್ನಾಟಕ ಹೋರಾಟ ಸಮಿತಿ ಪತ್ರ ಚಳುವಳಿ, ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅತ್ತ ಕಾಂಗ್ರೆಸ್ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಉತ್ತರ ಕರ್ನಾಟಕದ 26 ಜನ ಶಾಸಕರು ಸದನದಲ್ಲಿ ಧ್ವನಿಯತ್ತಲಿದ್ದಾರೆ ಅಂತಾ ಹೋರಾಟ ಸಮಿತಿ ಹೇಳಿಕೊಂಡಿದೆ.

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಕಳೆದ 13 ವರ್ಷಗಳಿಂದ ನಿರಂತರವಾಗಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಪ್ರತಿ ವರ್ಷವೂ ಹತ್ತಾರು ಬೇಡಿಕೆಗಳನ್ನ ಇಟ್ಟುಕೊಂಡು ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಲೇ ಬಂದಿವೆ. ಈಗ ಉತ್ತರ ಕರ್ನಾಟಕ ಸಮಿತಿ ಮತ್ತು ಉತ್ತರ ಕರ್ನಾಟಕ ವಿಕಾಸ ವೇದಿಕೆ ಜಂಟಿಯಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ತೀವ್ರಗೊಳಿಸುತ್ತಿವೆ. ಬರೋ ಅಧಿವೇಶನದಲ್ಲಿ ಬೆಳಗಾವಿ ಎರಡನೇ ರಾಜಧಾನಿ ಮಾಡಬೇಕು, ಸುವರ್ಣ ವಿಧಾನಸೌಧಕ್ಕೆ ಸೆಕ್ರೆಟರಿ ಮಟ್ಟದ ಕಚೇರಿ ಸ್ಥಾಪಿಸಬೇಕು ಮತ್ತು ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡುವಂತೆ ಸರ್ಕಾರದ ಮುಂದೆ ದಶಕಗಳಿಂದ ಭೇಟಿ ಇಟ್ಟಿದೆ.
13 ವರ್ಷಗಳ ಹೋರಾಟಕ್ಕೆ ಯಾವುದೇ ಸರ್ಕಾರ ಸ್ಪಂದಿಸದಿದ್ದಾಗ ಈಗ ಪ್ರತ್ಯೇಕ ರಾಜ್ಯ ಕೂಗು ಬಲವಾಗುತ್ತಿದೆ. ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಶಾಸಕರಿಂದ ರಾಜು ಕಾಗೆಯಂತೆ ಪ್ರತ್ಯೇಕ ರಾಜ್ಯಕ್ಕೆ ಪತ್ರ ಬರೆಯುವಂತೆ ಹೋರಾಟಗಾರರು ಶಾಸಕರನ್ನು ಒತ್ತಾಯಿಸಲಿದ್ದಾರೆ. ಇದರೊಂದಿಗೆ ಈವರೆಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ಕೈಗೊಂಡ ಜನಾಭಿಪ್ರಾಯದಲ್ಲಿ 1 ಕೋಟಿ 44 ಲಕ್ಷ ಜನರು ಸಹಿ ಮಾಡಿ ಬೆಂಬಲಿಸಿದ್ದು, ಇದನ್ನೇ ದಾಖಲೆ ಮಾಡಿಕೊಂಡು ಕಾನೂನು ಹೋರಾಟಕ್ಕೂ ಪ್ಲಾನ್ ಮಾಡಲಾಗಿದೆ.

ಇನ್ನೂ ಬೆಳಗಾವಿಯ ಶಕ್ತಿಸೌಧದ ಹೊರಗೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆದ್ರೆ. ಅತ್ತ ಸದನದಲ್ಲಿ ಉತ್ತರ ಕರ್ನಾಟಕ ಶಾಸಕರು ಪ್ರತ್ಯೇಕ ರಾಜ್ಯದ ಕಿಡಿ ಹೊತ್ತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯಕ್ಕಾಗಿ ರಾಜ್ಯಪಾಲರು, ಪ್ರಧಾನಿ, ರಾಷ್ಟ್ರಪತಿ ಗಳಿಗೆ ಪತ್ರ ಬರೆದಿರೋದು ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಉತ್ತರ ಕರ್ನಾಟಕ 15 ಜಿಲ್ಲೆಯ ಪ್ರಭಾವಿ ಶಾಸಕರು ರಾಜು ಕಾಗೆ ನೇತೃತ್ವದ ಪ್ರತ್ಯೇಕ ರಾಜ್ಯದ ಕುರಿತು ಸಭೆ ನಡೆಸಲಿದ್ದಾರೆ. ಅನಂತರ ಡಿಸೆಂಬರ್ 11 ರಂದು ಸದನದಲ್ಲಿ ರಾಜು ಕಾಗೆ ಸೇರಿ ಉತ್ತರ ಕರ್ನಾಟಕ ಶಾಸಕರು ಧ್ವನಿ ಎತ್ತುತ್ತಾರೆ ಅಂತಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಇಂದು ಬೆಳಗಾವಿಯಲ್ಲಿ ಪ್ರೇಸ್ಮೀಟ್ ಮಾಡಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ರಾಜು ಕಾಗೆ, ನಿಖಿಲ್ ಕತ್ತಿ, ಬಾಗಲಕೋಟೆಯಲ್ಲಿ ವಿಜಯಾನಂದ ಕಾಶಪ್ಪನವರ, ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಉತ್ತರ ಕರ್ನಾಟಕದ 15 ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಅಂತಾ ಉತ್ತರ ಕರ್ನಾಟಕ ಹೋರಾಟ ಸಮಿತಿ ಹೇಳಿಕೊಂಡೆ. ಒಟ್ಟಿನಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇತ್ತ ಉತ್ತರ ಕರ್ನಾಟಕಕ್ಕೆ ಆಗ್ತಿರೋ ಅನ್ಯಾಯದ ವಿರುದ್ಧ ಪ್ರತ್ಯೇಕ ರಾಜ್ಯದ ಕೂಗು ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಈಗಿನಿಂದಲೇ ಗೋಚರಿಸುತ್ತಿವೆ.


