ಮಧ್ಯಪ್ರದೇಶ: ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ವಿವಾದಕ್ಕಿಡಾಗಿದ್ದಾರೆ. ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ಆಕೆಯೊಂದಿಗೆ ಆತ ಸಂಬಂಧ ಬೆಳೆಸುವವರೆಗೆ ಮೀಸಲಾತಿ ಮುಂದುವರಿಯಬೇಕು ಎನ್ನುವ ಮೂಲಕ ಐಎಎಸ್ ಅಧಿಕಾರಿ ಸಂತೋಷ ವರ್ಮಾ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಸಂಘದ ಸಾಮಾನ್ಯ ಸಭೆಯಲ್ಲಿ ಈ ಹೇಳಿಕೆ ನೀಡಿರೋದು ಭಾರಿ ಸದ್ದು ಮಾಡಿದೆ. ಭೋಪಾಲ್ನ ಅಂಬೇಡ್ಕರ್ ಮೈದಾನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂತೋಷ ವರ್ಮಾ, ಬ್ರಾಹ್ಮಣ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಅಥವಾ ನನ್ನ ಮಗ ಆಕೆಯೊಂದಿಗೆ ಸಂಬಂಧ ಹೊಂದುವವರೆಗೆ ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ವರ್ಮಾ ನೀಡಿದ ಈ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದ್ದು, ಇಡೀ ಮೇಲ್ಜಾತಿಯ ಸಮುದಾಯಗಳಿಗೆ ಮಾಡಿರುವ ಅಪಮಾನ ಎನ್ನಲಾಗುತ್ತಿದೆ. ಮದುವೆ ಎಂಬುದು ಖಾಸಗಿ ವಿಷಯ. ಪ್ರತಿಯೊಬ್ಬ ವಯಸ್ಕರಿಗೂ ಮದುವೆಯಾಗಲು ತಮ್ಮದೇ ಆದ ಸ್ವಾತಂತ್ರ್ಯ ಇದೆ. ಯಾರು ಯಾರನ್ನು ಮದುವೆಯಾಗುತ್ತಾರೆ ಎಂಬುದು ಅವರ ವೈಯಕ್ತಿಕ ವಿಷಯ ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ ವರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಅಷ್ಟಕ್ಕೂ ಯಾರದೇ ಮಗಳು ದಾನ ಮಾಡುವ ವಸ್ತುವಲ್ಲ. ಮೇಲ್ಜಾತಿಯ ಸಮುದಾಯದ ಹೆಣ್ಣುಮಗಳ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡುವುದು ಅತ್ಯಂತ ಖಂಡನೀಯ. ಮದುವೆ ವೈಯಕ್ತಿಕ ವಿಚಾರವಾದದ್ದು. ಮೀಸಲಾತಿಗೂ ಇದಕ್ಕೂ ಏನು ಸಂಬಂಧ..? ಈಗ ಸಮಾಜ ಬಹಳಷ್ಟು ಬದಲಾಗಿದೆ. ಹೆಚ್ಚಿನ ಸಂಖ್ಯೆಯ ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.


