ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಳಲೆ ರೋಗ ದಾಂಗುಡಿ ಇಟ್ಟಿದೆ. ಬೆಳಗಾವಿಯ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಸಾವಿಗೆ ಕಾರಣವಾಗಿದ್ದ ಈ ಮಾರಕ ಗಳಲೆ ರೋಗ ಇದೀಗ ಬೆಳಗಾವಿ ಜಿಲ್ಲೆಯ ಸಾಕು ಪ್ರಾಣಿಗಳಿಗೂ ವಕ್ಕರಿಸುತ್ತಿದೆ.

ಹಿಮೋರೆಜಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾ ಮತ್ತು ಎಚ್.ಎಸ್ ಬ್ಯಾಕ್ಟೀರಿಯಾ ಸೋಂಕಿನಿಂದ ಬೆಳಗಾವಿ ಜಿಲ್ಲೆಯ ರೈತರು ಆತಂಕಕ್ಕಿಡಾಗಿದ್ದಾರೆ. ಗಂಟು ರೋಗದಿಂದ ಈಗಾಗಲೇ ಏಳು ಜಾನುವಾರುಗಳು ಜಿಲ್ಲೆಯಲ್ಲಿ ಸಾವನ್ನಪ್ಪಿದ್ದು, ಸಾವಿಗೀಡಾದ ಜಾನುವಾರುಗಳಿಗೆ ಹಿಮೋರೆಜಿಕ್ ಸೆಪ್ಟಿಸೆಮೀಯಾ ಸೋಂಕು ತಾಗಿರುವ ಶಂಕೆ ದಟ್ಟವಾಗಿದೆ.
ಬೆಳಗಾವಿಯಲ್ಲಿ ಹಿಮೋರೆಜಿಕ್ ಸೆಪ್ಟಿಸೆಮೀಯಾ ಉಲ್ಭಣ ಆಗುವ ಸಾಧ್ಯತೆಯಿದ್ದು, ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆಯ ಮುನ್ಸೂಚನೆ ನೀಡದೆ. ಪಶುಸಂಗೋಪನೆ ಇಲಾಖೆಗೆ ಈಗಾಗಲೇ ಈ ಸಂದೇಶ ರವಾನಿಸಿರುವ ರಾಷ್ಟ್ರೀಯ ಸಂಸ್ಥೆ, ರೈತರು ಹಸುಗಳ ಆರೈಕೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯಿಂದಲೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇಷ್ಟಾದರೂ ಯಾವುದೇ ಮುಂಜಾಗ್ರತೆ ವಹಿಸದೇ ಪಶು ಸಂಗೋಪನೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ಪಶು ಸಂಗೋಪನೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಏಳು ಜಾನುವಾರುಗಳು ಬಲಿಯಾದ್ವಾ ಎನ್ನುವ ಆರೋಪ ಕೇಳಿಬರುತ್ತಿದ್ದು, ಪಶುಸಂಗೋಪನೆ ಬೆಳಗಾವಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಳಲೆ ರೋಗ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಸರ್ಕಾರಕ್ಕೆ ರೈತರ ಆಗ್ರಹಿದ್ದು, ಮೃತ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.


